ಕನ್ನಡದ ಏಳಿಗೆಗೆ ಶ್ರಮಿಸಿದ ಬಾದಾಮಿ ಚಾಲುಕ್ಯರು.
ಕನ್ನಡದ ಏಳಿಗೆಗೆ ಶ್ರಮಿಸಿದ ಬಾದಾಮಿ ಚಾಲುಕ್ಯರು:ಬೆಂಗಳೂರಿನಿಂದ 510 ಕಿ.ಮೀ. ಹುನಗುಂದದಿಂದ 26 ಕಿ.ಮೀ. ದೂರವಿರುವ ಐಹೊಳೆ ಬಾಗಲಕೋಟೆ ಜಿಲ್ಲೆಯ ಪ್ರಮುಖ ಐತಿಹಾಸಿಕ ಸ್ಥಳ. ಶಾಸನಗಳಲ್ಲಿ ಇದನ್ನು ಅಯ್ಯಾವೊಳೆ, ಹಾಗೂ ಆರ್ಯಪುರ ಎಂದು ಉಲ್ಲೇಖಿಸಲಾಗಿದೆ. ಬಾದಾಮಿ ಚಾಲುಕ್ಯರ ಕಾಲದಲ್ಲಿ ಒಂದು ಪ್ರಮುಖ ನಗರವಾಗಿದ್ದು ವಾಸ್ತುಶಿಲ್ಪ ಕೃತಿಗಳಿಗೂ ಹೆಸರುವಾಸಿಯಾಗಿದೆ. ಇಲ್ಲಿ ಚಾಲುಕ್ಯರ ಆಡಳಿತ ಆರಂಭವಾದ ಮೇಲೆ ಅಭಿವೃದ್ಧಿ ತ್ವರಿತವಾಯಿತು ಮತ್ತು ಏಳನೇಯ ಶತಮಾನದ ಸುಮಾರಿಗಾಗಲೇ ಇದು ಪ್ರಸಿದ್ದ ಕಲಾ ಕೇಂದ್ರವಾಯಿತು. ನಮಗೆ ಇಂದು ನೋಡ ಸಿಗುವ ಹಲವು ಕಟ್ಟಡಗಳನ್ನು ಆಗ ನಿರ್ಮಿಸಲಾಯಿತು. ರಾಷ್ಟ್ರಕೂಟ ಹಾಗೂ ಕಲ್ಯಾಣ ಚಾಲುಕ್ಯರ ಕಾಲದಲ್ಲಿ ಕೆಲವು ದೇಗುಲಗಳನ್ನು ನಿರ್ಮಿಸಿದ್ದಾರೆ. ಐಹೊಳೆಯ ಕೆಲವು ದೇಗುಲಗಳ ಬಳಿ ನಡೆಸಿದ ಸಂಶೋಧನೆಯಿಂದಾಗಿ ಚಾಲುಕ್ಯರ ಪೂರ್ವ ಕಾಲದ ಇಟ್ಟಿಗೆಗಳ ತಳಪಾಯಗಳು ಹಾಗೂ ಮಡಿಕೆ ಕುಡಿಕೆಗಳು ದೊರೆತಿವೆ.
ಭಾರತೀಯ ಇತಿಹಾಸದ ಗರ್ಭದಲ್ಲಿ ಸಾವಿರಾರು ವರ್ಷಗಳಿಂದ ಕರ್ನಾಟಕ ರಾಜ್ಯವು ತನ್ನ ಶ್ರೀಮಂತಿಕೆಯ ಕಲಾ ವೈಭವವನ್ನು ಹುದುಗಿಸಿಕೊಂಡಿದೆ. ಕರ್ನಾಟಕವನ್ನು ಆಳ್ವಿಕೆ ಮಾಡಿದ ರಾಜಮನೆತನಗಳು ಈ ರೀತಿಯಾಗಿವೆ. ಮೌರ್ಯರು, ಶಾತವಾಹನರು, ಕದಂಬರು, ಬಾದಾಮಿ ಚಾಲುಕ್ಯರು, ರಾಷ್ಟ್ರಕೂಟರು, ಕಲ್ಯಾಣಿಯ ಚಾಲುಕ್ಯರು, ಹೊಯ್ಸಳರು, ವಿಜಯನಗರ ಸಾಮ್ರಾಜ್ಯ, ಆದಿಲ್ಶಾಹಿಯ ಮನೆತನ, ಮೈಸೂರು ಒಡೆಯರು, ಬ್ರಿಟೀಷ್ ಆಡಳಿತ ಕರ್ನಾಟಕ ರಾಜ್ಯವನ್ನು ಆಳಿದವರು. ವಿವಿಧ ಸಂತತಿಗಳಿಗೆ ಸೇರಿದ ದೊರೆಗಳು ಆಯಾ ಪರಂಪರೆಗೆ ಸೇರಿದ ಅರಸರು ಅವರ ಸಂಪ್ರದಾಯದ ಮೇರೆಗೆ ನಿರ್ಮಿಸಿದ ವೈಭವೋಪೆತ ಸಾಂಸ್ಕೃತಿಕ ಅವಶೇಷಗಳು ಇಂದಿಗೂ ಜೀವಂತವಾಗಿದ್ದು ಅವುಗಳಿಗೆ ಸಾಕ್ಷಿಭೂತವಾಗಿವೆ. ಇಲ್ಲಿ ಜೈನ, ಬೌದ್ಧ ಶೈವ, ವೈಷ್ಣವ ನಾಲ್ಕು ಮತಗಳ ವಿಭಿನ್ನತೆ ವಿಶಿಷ್ಟತೆ ಇಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ.
ಬಾದಾಮಿ ಚಾಲುಕ್ಯರ ಕಾಲದಲ್ಲಿ ಶಿಲ್ಪಕಲೆ ಹುಟ್ಟಿರುವದು – ಐಹೊಳೆಯಲ್ಲಿ ಬೆಳವಣಿಗೆ ಹೊಂದಿದ್ದು ಬಾದಾಮಿಯಲ್ಲಿ ಪರಿಪೂರ್ಣತೆಯ ಹಂತ ತಲುಪಿದ್ದು ಪಟ್ಟದಕಲ್ಲಿನಲ್ಲಿ, ಬಾದಾಮಿ ಚಾಲುಕ್ಯರ ಮೂಲಪುರುಷನಾದ ಜಯಸಿಂಹನೂ ವಿಷ್ಣು
ಆರಾಧಕನೂ ಮತ್ತು ಕದಂಬದ ಮಾಂಡಲೀಕನೂ ಆಗಿದ್ದನು. ಈತನ ಮಗನಾದ ರಣರಾಗನು ಜಗದೇಕನಾಥನೂ ಮತ್ತು ದಿವ್ಯಾನುಬಾಹು ಆಗಿದ್ದನು. ರಣರಾಗನ ಮಗನಾದ ಒಂದನೆಯ ಪುಲಕೇಶಿಯು ಕ್ರಿ.ಶ. (543-566)ರ ವರೆಗೆ ಆಳ್ವಿಕೆ ಮಾಡಿದನು. ಲಕ್ಷ್ಮೀವಲ್ಲಭನಾದ ಮೊದಲನೇಯ ಪುಲಕೇಶಿಯು ಐಹೊಳೆಯಿಂದ ಬಾದಾಮಿಗೆ ತನ್ನ ರಾಜಧಾನಿಯ ಬದಲಾವಣೆ ಮಾಡಿ ಹೆಚ್ಚು ಕಾಲಾವಧಿ ಚಾಲುಕ್ಯರ ಆಳ್ವಿಕೆ ಮಾಡಿದ್ದು ಬಾದಾಮಿಯಲ್ಲಿ ಅದಕ್ಕೆ ಇತಿಹಾಸದಲ್ಲಿ ಬಾದಾಮಿಯ ಚಾಲುಕ್ಯರೆಂದೇ ಜನಪ್ರೀಯರಾಗಿದ್ದಾರೆ.
ಒಟ್ಟಾರೆ ಹೇಳುವದಾದರೆ – ಐಹೊಳೆಯಲ್ಲಿ ವಿದ್ಯಾರ್ಥಿಗಳಿಗೆ ವಾಸ್ತುಶಿಲ್ಪದ ಬಗ್ಗೆ ಶಿಕ್ಷಣ ಕೊಡುತ್ತಿರುವದರಿಂದ ಶೈಕ್ಷಣಿಕ ರಾಜಧಾನಿಯೆಂದು, ಬಾದಾಮಿಯಲ್ಲಿ ರಾಜ್ಯಭಾರ ಮಾಡುತ್ತಿರುವದರಿಂದ ರಾಜಕೀಯ ರಾಜಧಾನಿಯೆಂದು ಹಾಗೆ ಪಟ್ಟದಕಲ್ಲಿನಲ್ಲಿ ಯುವರಾಜರ ಪಟ್ಟಾಭಿಷೇಕ ನೃತ್ಯ ಕಾರ್ಯಕ್ರಮಗಳು ನಡೆಯುತ್ತಿರುವದರಿಂದ ಅದನ್ನು ಸಾಂಸ್ಕೃತಿಕ ರಾಜಧಾನಿಯೆಂದು ಕರೆಯಲಾಗುತ್ತಿತ್ತು.
ಶ್ರೀ ಸಾಮಾನ್ಯರು ಹೇಳುವ ಮಾತು ಅತಿ ಮನೋರಂಜಕವಾಗಿದೆ. ಅವರ ಅಭಿಪ್ರಾಯದಲ್ಲಿ ಐಹೊಳೆ -ಪ್ರಾಥಮಿಕ ಶಾಲೆ, ಬಾದಾಮಿ-ಮಾಧ್ಯಮಿಕ ಶಾಲೆ, ಪಟ್ಟದಕಲ್ಲು – ಕಾಲೇಜು ರೀತಿಯಲ್ಲಿ ಬೆಳವಣಿಗೆ ಹೊಂದಿದರೆ ಮುಂದೆ ಬೇಲೂರ-ಹಳೇಬಿಡು ವಿಶ್ವವಿದ್ಯಾಲಯದ ರೀತಿಯಲ್ಲಿ ಕರ್ನಾಟಕದಲ್ಲಿ ಶಿಲ್ಪಕಲೆ ಹಂತ ಹಂತವಾಗಿ ಬೆಳವಣಿಗೆ ಹೊಂದಿತು.
ವಿಷ್ಣುವಿನ ದಶಾವತಾರಗಳು ಈ ರೀತಿಯಾಗಿವೆ.
ನಮ್ಮ ಹಿಂದು ಸಂಪ್ರದಾಯದ ಪ್ರಕಾರ ಮೂರು ದೇವರನ್ನು ಪೂಜಿಸುತ್ತೆವೆ. ಬ್ರಹ್ಮ ವಿಷ್ಣು ಮಹೇಶ್ವರ, ಬ್ರಹ್ಮಸೃಷ್ಟಿಕರ್ತ ವಿಷ್ಣುಪಾಲನಕರ್ತ, ಮಹೇಶ್ವರ – ಸಂಹಾರ ಕರ್ತ.
1. ಮತ್ತ್ವವತಾರ – ಜಲಚರವಾಸಿ
2. ಕುರುಮ (ಆಮೆ) ಅವತಾರ – ಉಭಯವಾಸಿ
3. ವರಾಹ – ಕಾಡುವಾಸಿಯಾಗಿ ಭೂದೇವಿ ರಕ್ಷಣೆ
4. ಉಗ್ರನರಸಿಂಹ – ಕ್ರೌರ್ಯ. ಹಿರಣ್ಯಕಶ್ಯಪು ಸಂಹಾರ
5. ವಾಮನ ಅವತಾರ – ಬಲಿಚಕ್ರವರ್ತಿ ರಾಕ್ಷಸನ ಸಂಹಾರ
6. ಪರಶುರಾಮ – ಕ್ಷತ್ರೀಯರನ್ನು ಸಂಹಾರ
7. ರಾಮ – ಸಮಾಜ ಸೇವೆ
8. ಕೃಷ್ಣ- ದುಷ್ಟರಿಂದ ಒಳ್ಳೆಯವರ ರಕ್ಷಣೆ
9. ಬುದ್ಧ – ಧಾರ್ಮಿಕ ಬೋಧನೆ
10. ಕಲ್ಕಿ – ಮೂಲ ಸ್ವರೂಪಕ್ಕೆ ಬರುವದು
ಪಲ್ಲವರ ದೊರೆಯಾದ ನರಸಿಂಹವರ್ಮನು ಚಾಲುಕ್ಯರ ಪ್ರಸಿದ್ಧ ದೊರೆಯಾದ ಇಮ್ಮಡಿ ಪುಲಕೇಶಿಯನ್ನು ಕೊಂದು ‘ವಾತಾಪಿಕೊಂಡ ‘ ಎಂಬ ಬಿರುದನ್ನು ಧರಿಸಿ, ಬಾದಾಮಿಯನ್ನು(642-655) 13 ವರ್ಷಗಳವರೆಗೆ ಬಾದಾಮಿ ಪಲ್ಲವರ ಆಧೀನದಲ್ಲಿತ್ತು. ನಂತರ ಇಮ್ಮಡಿ ಪುಲಿಕೇಶಿಯ ಮಗನಾದ ಮೊದಲನೇ ವಿಕ್ರಮಾದಿತ್ಯನು ಮರೆಯಾಗಿದ್ದ ಚಾಲುಕ್ಯ ಸಾಮ್ರಾಜ್ಯವನ್ನು ತನ್ನ ಗುರುಗಳಾದ ಸುದರ್ಶನಾಚಾರ್ಯರಿಂದ ಶೈವ ದೀಕ್ಷೆಯನ್ನು ಪಡೆದು ಮರು ಸ್ಥಾಪಿಸಿದನು.
ಚಾಲುಕ್ಯರ ಕೊನೆಯ ಅರಸನಾದ ಇಮ್ಮಡಿ ಕೀರ್ತಿವರ್ಮ ಕ್ರಿ.ಶ. 745-752 ತನಕ ಆಳ್ವಿಕೆ ಮಾಡಿದನು ನಂತರ ರಾಷ್ಟ್ರಕೂಟರ ಒಂದನೇಯ ಕೃಷ್ಣನು ಈ ಚಾಲುಕ್ಯ ಸಾಮ್ರಾಜ್ಯವನ್ನು ಅಂತ್ಯಗೊಳಿಸಿದನು.
ಬಾದಾಮಿ ಚಾಲುಕ್ಯ ವಂಶದ ಉಗಮ.
ಚಾಲುಕ್ಯರ ಮೂಲದ ಬಗ್ಗೆ ಇತಿಹಾಸಕಾರರಲ್ಲಿ ಇನ್ನೂ ಭಿನ್ನಾಭಿಪ್ರಾಯವಿದೆ. ಒಂದು ಪೌರಾಣಿಕ ಕಥೆಯ ಪ್ರಕಾರ ಇಂದ್ರನ ವಿನಂತಿಯ ಮೇರೆಗೆ ಧರ್ಮ ಸ್ಥಾಪನೆಗಾಗಿ ಬ್ರಹ್ಮನು ತನ್ನ ಬೊಗಸೆ (ಚುಲಕ)ಯಿಂದ ವೀರಯೋಧ ನನ್ನು ಹುಟ್ಟಿಸಿದನಂತೆ,ಈ ವೀರಯೋಧನ ವಂಶವೇ ಮುಂದೆ ಚಾಲುಕ್ಯ ಸಾಮ್ರಾಜ್ಯವಾಗಿ ರೂಪಗೊಂಡಿತು.
ಇನ್ನೊಂದು ದಂತ ಕಥೆಯ ಪ್ರಕಾರ – ಹಾರೀತಿಯ ಅರ್ಥ್ಯ ಬಿಡುವ ಪಾತ್ರೆಯಿಂದ ಚಾಲುಕ್ಯರ ಹುಟ್ಟಿದರು ಮುಂದೆ ಇವರನ್ನು ಹಾರೀತಿಪುತ್ರರೆಂದು ವರ್ಣಿಸಲಾಗಿದೆ.
ಹುಯನ್ತ್ಸಾಂಗನು ತನ್ನ ಪುಸ್ತಕದಲ್ಲಿ ಚಾಲುಕ್ಯರು ಕ್ಷತ್ರಿಯರೆಂದು ತಿಳಿಸಿರುತ್ತಾನೆ. ಇವರದು ಮಾನವ್ಯ ಗೋತ್ರ. ಚಾಲುಕ್ಯರು ಶಿವ ಹಾಗೂ ಕಾರ್ತಿಕೇಯನ ಭಕ್ತರಾಗಿದ್ದರು. ಇವರನ್ನು ತಮ್ಮ ಮನೆತನದ ಹೆಸರನ್ನು ಶಾಸನಗಳಲ್ಲಿ ಚಲುಕ್ಯರೆಂದು ಗುರುತಿಸಿಕೊಂಡಿರುತ್ತಾರೆ. ಗುಹೆಗಳ ಎದುರುಗಡೆ ಇರುವ ಬೆಟ್ಟದ ಮೇಲೆ ಚಾಲುಕ್ಯರ ಅರಮನೆ ಇತ್ತು ಅಂತ ಕೆಲವು ಇತಿಹಾಸಕಾರರ ಅಭಿಪ್ರಾಯ ಏಕೆಂದರೆ ಬೆಟ್ಟದ ಮೇಲೆ ಆನೆ – ಕುದುರೆಗಳನ್ನು ಕಟ್ಟುವ ಜಾಗವಿದೆ. ಮತ್ತು ಮದ್ದು ಗುಂಡುಗಳನ್ನು ಸಂಗ್ರಹಿಸುವ ಮತ್ತು ಧ್ವಜ ಸ್ಥಂಭವನ್ನು ಕಾಣಬಹುದು.
ಇಮ್ಮಡಿ ಪುಲಿಕೇಶಿ (ಸಾ.ಶ. 609-642).
ಇವನು ಬಾದಾಮಿ ಚಾಲುಕ್ಯ ದೊರೆಗಳಲ್ಲಿ ಶ್ರೇಷ್ಠನು, ಕೀರ್ತಿವರ್ಮನ ಮಗನಾದ ಇವನು ಅಧಿಕಾರಕ್ಕೆ ಬಂದಾಗ ಅಪ್ರಾಪ್ತನಾಗಿದ್ದನು. ಆದ್ದರಿಂದ, ಚಿಕ್ಕಪ್ಪನಾದ ಮಂಗಳೇಶನು ಆಡಳಿತ ನೋಡಿಕೊಂಡನು. ಇಮ್ಮಡಿ ಪುಲಿಕೇಶಿಯ ಬಗ್ಗೆ ಹೂಯನ್ ತ್ಸಾಂಗನ ಸಿ-ಯು-ಕಿ, ಬಾಣಭಟ್ಟನ ಹರ್ಷ ಚರಿತೆ, ಐಹೊಳೆ ಶಿಲಾಶಾಸನ ಮುಂತಾದವುಗಳು ಮಾಹಿತಿಯನ್ನು ನೀಡುತ್ತವೆ.
ಸಾಧನೆಗಳು.
ಇಮ್ಮಡಿ ಪುಲಿಕೇಶಿಯು ಪ್ರಾಪ್ತವಯಸ್ಸಿಗೆ ಬಂದರೂ ಮಂಗಳೇಶನು ಅಧಿಕಾರವನ್ನು ಅವನಿಗೆ ಹಸ್ತಾಂತರ ಮಾಡದೇ ತನ್ನ ಮಗನನ್ನು ಅಧಿಕಾರಕ್ಕೆ ತರುವ ಪ್ರಯತ್ನ ಮಾಡಿದನು. ಇದರಿಂದ ಕೆರಳಿದ ಇಮ್ಮಡಿ ಪುಲಿಕೇಶಿಯು ಮಂಗಳೇಶನನ್ನು ಎಳಪಟ್ಟುಸಿಂಬಿಗೆ ಯುದ್ಧದಲ್ಲಿ ಕೊಂದು ಸಾ.ಶ. 609 ರಲ್ಲಿ ಸಿಂಹಾಸನವನ್ನೇರಿದನು.
ಪುಲಿಕೇಶಿಯು ಮಂಗಳೇಶನೊಡನೆ ಅಂತಃಕಲಹದಲ್ಲಿ ತೊಡಗಿದ್ದಾಗ ರಾಷ್ಟ್ರಕೂಟರ ನಾಯಕರಾದ ಅಪ್ಪಾಯಿಕ ಮತ್ತು ಗೋವಿಂದರು ಚಾಲುಕ್ಯ ಪ್ರದೇಶಗಳ ಮೇಲೆ ದಾಳಿ ಮಾಡಿದರು. ಪುಲಿಕೇಶಿಯು ಈ ಇಬ್ಬರನ್ನು ಭೀಮಾ ನದಿ ತೀರದಲ್ಲಿ ಸೋಲಿಸಿದನು. ಅಪ್ಪಾಯಿಕ ಭಯಗೊಂಡು ಯುದ್ಧಭೂಮಿಯಿಂದ ಓಡಿ ಹೋದರೆ, ಗೋವಿಂದನು ಪುಲಿಕೇಶಿಗೆ ಶರಣಾದನು.
ನಂತರ ಕದಂಬರ ರಾಜಧಾನಿಯಾದ ಬನವಾಸಿಯನ್ನು ಗೆದ್ದುಕೊಂಡನು. ಆನಂತರ ಕೊಂಕಣದ ಮೌರ್ಯರನ್ನು, ದಕ್ಷಿಣ ಕನ್ನಡದ ಅಳುಪರನ್ನು ಮತ್ತು ತಲಕಾಡಿನ ಗಂಗರನ್ನು ಸೋಲಿಸಿದನು. ದಕ್ಷಿಣದಲ್ಲಿ ಸಣ್ಣಪುಟ್ಟ ಅರಸರನ್ನು ಗೆದ್ದಬಳಿಕ ಉತ್ತರದ ಕಡೆ ಮುಂದುವರಿದು ಲಾಟ (ಗುಜರಾತ್), ಮಾಳ್ವ, ಗೂರ್ಜರ ದೊರೆಗಳನ್ನು ಸೋಲಿಸಿದನು. ಈ ಗುಜರಾತ್ ಶಾಖೆಗೆ ತನ್ನ ಸಹೋದರ ಜಯಸಿಂಹನನ್ನು ಅಧಿಕಾರಿಯನ್ನಾಗಿ ನೇಮಕ ಮಾಡಿದನು.
ಹರ್ಷವರ್ಧನನೊಡನೆ ಯುದ್ಧ ಸಾ.ಶ. 634.
ಹರ್ಷವರ್ಧನನು ಸೈನ್ಯಸಮೇತನಾಗಿ ಕನೌಜ್ನಿಂದ ಹೊರಟು ನರ್ಮದಾ ನದಿ ತೀರದಲ್ಲಿ ಬೀಡುಬಿಟ್ಟನು. ಇಮ್ಮಡಿ ಪುಲಿಕೇಶಿಯು ಉತ್ತರಪಥೇಶ್ವರನೆಂದು ಪ್ರಸಿದ್ಧನಾಗಿದ್ದ ಹರ್ಷವರ್ಧನನ್ನು ಎದುರಿಸಲು ಸಿದ್ಧನಾದನು. ಇವರಿಬ್ಬರ ನಡುವೆ ಸಾ.ಶ.634ರಲ್ಲಿ ಭೀಕರ ಯುದ್ಧ ಸಂಭವಿಸಿತು. ಹರ್ಷವರ್ಧನನು ಈ ಯುದ್ಧದಲ್ಲಿ ಸೋಲುಂಡನು. ಗೆಲುವು ಪಡೆದ ಇಮ್ಮಡಿ ಪುಲಿಕೇಶಿ ‘ಪರಮೇಶ್ವರ’ ಎಂಬ ಬಿರುದನ್ನು ಧರಿಸಿದನು. ನಂತರ ಇವರಿಬ್ಬರ ನಡುವೆ ಸ್ನೇಹ ಸಂಬಂಧ ಏರ್ಪಟ್ಟು ನರ್ಮದಾ ನದಿ ಇವರಿಬ್ಬರ ಸಾಮ್ರಾಜ್ಯಗಳ ಗಡಿಯಾಯಿತು.
ಪೂರ್ವ ಭಾಗದ ಕಡೆ ಮುಂದುವರೆದ ಪುಲಿಕೇಶಿಗೆ ದಕ್ಷಿಣ ಕೋಸಲ ಮತ್ತು ಕಳಿಂಗ ದೊರೆಗಳು ಶರಣಾದರು. ಆಮೇಲೆ ಪಿಷ್ಠಪುರವನ್ನು ಗೆದ್ದುಕೊಂಡು ವೆಂಗಿಮಂಡಲವನ್ನು ವಶಪಡಿಸಿಕೊಂಡನು. ವೆಂಗಿ ಪ್ರಾಂತ್ಯಕ್ಕೆ ಮತ್ತೊಬ್ಬ ಸಹೋದರ ಕುಬ್ಬ ವಿಷ್ಣುವರ್ಧನನ್ನು ಅರಸನನ್ನಾಗಿ ನೇಮಕ ಮಾಡಿದನು. ಇದು ವೆಂಗಿ ಚಾಲುಕ್ಯ ರಾಜ್ಯ ಸ್ಥಾಪನೆಗೆ ಅಡಿಪಾಯ ಹಾಕಿತು.
ಪುಲಿಕೇಶಿಯು ಕಂಚಿಯ ಮೇಲೆ ದಾಳಿ ಮಾಡಿ ಪಲ್ಲವರ ದೊರೆ 1ನೇ ಮಹೇಂದ್ರವರ್ಮನನ್ನು ಪೊಲ್ಲಿಲೂರು ಎಂಬಲ್ಲಿ ಸೋಲಿಸಿದನು. ಅವನು ಹಲವು ದಿನಗಳ ಕಾಲ ಕಂಚಿಯಲ್ಲಿ ಬೀಡುಬಿಟ್ಟು ದೇವಾಲಯಗಳಲ್ಲಿ ಪೂಜೆ ಸಲ್ಲಿಸಿದನು. ಪುಲಿಕೇಶಿಯ ಈ ದಾಳಿಯು ಪಲ್ಲವ ಮತ್ತು ಚಾಲುಕ್ಯ ಸಂಘರ್ಷಕ್ಕೆ ನಾಂದಿಯಾಯಿತು. ನಂತರ ಚೋಳ ಮತ್ತು ಚೇರ ದೊರೆಗಳನ್ನು ಸೋಲಿಸಿ ಅವರಿಂದ ಕಪ್ಪ ಕಾಣಿಕೆಗಳನ್ನು ಪಡೆದು ರಾಜಧಾನಿಗೆ ಮರಳಿದನು.
ಇಮ್ಮಡಿ ಪುಲಿಕೇಶಿಯು ಕೊನೆಯ ದಿನಗಳಲ್ಲಿ ಕಂಚಿಯನ್ನು ಗೆಲ್ಲಲು ಮುಂದಾದನು. ಆದರೆ, ಪಲ್ಲವ ದೊರೆ ಒಂದನೇ ನರಸಿಂಹವರ್ಮನಿಂದ ಸಾ.ಶ.642ರಲ್ಲಿ ಇಮ್ಮಡಿ ಪುಲಿಕೇಶಿಯು ಪೆರಿಯಾಲ, ಮಣಿಮಂಗಲ ಮತ್ತು ಸುರಮಾರ ಕದನಗಳಲ್ಲಿ ಸೋಲಿಸಲ್ಪಟ್ಟನು. ಈ ಯುದ್ಧದಲ್ಲಿ ಅವನು ಕೊಲ್ಲಲ್ಪಟ್ಟಿರಬೇಕೆಂದು ನಂಬಲಾಗಿದೆ. ನರಸಿಂಹವರ್ಮನು ಬಾದಾಮಿಯನ್ನು ವಶಪಡಿಸಿಕೊಂಡು ‘ವಾತಾಪಿಕೊಂಡನ್’ ಎಂಬ ಬಿರುದನ್ನು ಧರಿಸಿದನು. ಪಲ್ಲವರು ಬಾದಾಮಿಯನ್ನು ಲೂಟಿ ಮಾಡಿದರು. ಮುಂದಿನ ಕೆಲವು ವರ್ಷಗಳವರೆಗೆ ಚಾಲುಕ್ಯರು ಪಲ್ಲವರ ಹಿಡಿತಕ್ಕೆ ಒಳಪಟ್ಟರು.
ಇಮ್ಮಡಿ ಪುಲಿಕೇಶಿಯು ಪ್ರಾಚೀನ ಭಾರತದ ಅಗ್ರಗಣ್ಯ ಅರಸರಲ್ಲಿ ಒಬ್ಬನು. ಡ್ಯೂಯನ್ ತ್ಸಾಂಗ್ನು ಪುಲಿಕೇಶಿಯನ್ನು ಅತ್ಯಂತ ಪರಾಕ್ರಮಿ ಸಾಮ್ರಾಟ ಎಂದು ಕರೆದಿದ್ದಾನೆ. ಇವನ ಸಾಮ್ರಾಜ್ಯವು ಉತ್ತರದಲ್ಲಿ ನರ್ಮದಾ, ದಕ್ಷಿಣದಲ್ಲಿ ಮೈಸೂರು, ಪೂರ್ವದಲ್ಲಿ ಬಂಗಾಳ ಕೊಲ್ಲಿ ಮತ್ತು ಪಶ್ಚಿಮದಲ್ಲಿ ಅರಬ್ಬಿ ಸಮುದ್ರ ದವರೆಗೂ ವಿಸ್ತರಿಸಿತ್ತು. ಪರ್ಷಿಯಾದ ದೊರೆ ಇಮ್ಮಡಿ ಖುಸ್ತು ಮತ್ತು ಇಮ್ಮಡಿ ಪುಲಿಕೇಶಿಯು ರಾಯಭಾರಿಗಳನ್ನು ವಿನಿಮಯ ಮಾಡಿಕೊಂಡರು. ಖುಸ್ರುವಿನ ರಾಯಭಾರಿ ಪುಲಿಕೇಶಿಗೆ ತಮ್ಮ ರಾಜನ ನಿರೂಪಗಳನ್ನು ಅರ್ಪಿಸುತ್ತಿರುವ ಚಿತ್ರ ಅಜಂತಾದ ಒಂದನೆಯ ಗುಹಾಲಯದಲ್ಲಿದೆ. ಇವನಿಗೆ ‘ದಕ್ಷಿಣ ಪಥೇಶ್ವರ’, ‘ಸತ್ಯಾಶ್ರಯ’, ‘ಮಹಾರಾಜಾಧಿರಾಜ’, ‘ಪರಮೇಶ್ವರ’, ‘ಪೃಥ್ವಿವಲ್ಲಭ’ ಇತ್ಯಾದಿ ಬಿರುದುಗಳಿದ್ದವು.
ಬಾದಾಮಿ ಚಾಲುಕ್ಯ-ಪಲ್ಲವರ ಸಂಘರ್ಷ.
ಪಲ್ಲವ ಮತ್ತು ಚಾಲುಕ್ಯರ ನಡುವಿನ ಸಂಘರ್ಷವು ಸುಮಾರು ಒಂದು ಶತಮಾನದವರೆಗೆ ನಡೆಯಿತು. ಈ ಸಂಘರ್ಷದಲ್ಲಿ ಪ್ರಮುಖ ಪಾತ್ರ ವಹಿಸಿದವರು ಪಾಂಡ್ಯರು. ಕೃಷ್ಣ ತುಂಗಾಭದ್ರ ದೋ-ಆಬ್ ಪ್ರದೇಶಗಳ ಮೇಲೆ ಹಕ್ಕು ಸಾಧಿಸುವ ನಿಟ್ಟಿನಲ್ಲಿ ಈ ಇಬ್ಬರ ನಡುವೆ ದೀರ್ಘ ಸಂಘರ್ಷ ನಡೆಯಿತು.
ಇಮ್ಮಡಿ ಪುಲಿಕೇಶಿಯ ಕಾಲದಲ್ಲಿ ಆರಂಭವಾದ ಪಲ್ಲವ ಚಾಲುಕ್ಯ ಸಂಘರ್ಷವು ಕೊನೆಯ ಚಾಲುಕ್ಯ ದೊರೆಗಳ ಕಾಲದವರೆಗೂ ಮುಂದುವರೆಯಿತು. ಮೊದಲ ಹಂತದಲ್ಲಿ ಇಮ್ಮಡಿ ಪುಲಿಕೇಶಿ ಪಲ್ಲವರ ಒಂದನೇ ಮಹೇಂದ್ರವರ್ಮನನ್ನು ಸೋಲಿಸಿದನು. ಆದರೆ ಅವನು ಮಹೇಂದ್ರವರ್ಮನ ಮಗನಾದ ಒಂದನೇ ನರಸಿಂಹವರ್ಮನ್ನಿಂದ ಸೋಲಬೇಕಾಯಿತು. ಇದರಿಂದಾಗಿ ಬಾದಾಮಿ ಕೆಲವು ವರ್ಷಗಳ ಕಾಲ ಪಲ್ಲವರ ವಶಕ್ಕೆ ಹೋಯಿತು.
ಹನ್ನೆರಡು ವರ್ಷಗಳ ಕಾಲ ಪಲ್ಲವರ ವಶದಲ್ಲಿದ್ದ ಬಾದಾಮಿಯನ್ನು ಇಮ್ಮಡಿ ಪುಲಕೇಶಿಯ ಮಗನಾದ ಒಂದನೇ ವಿಕ್ರಮಾದಿತ್ಯನು ತನ್ನ ವಶಕ್ಕೆ ಪಡೆದನು. ಇವನು ಪಲ್ಲವ ದೊರೆಗಳಾದ ಒಂದನೇ ನರಸಿಂಹವರ್ಮನ್, ಎರಡನೇ ಮಹೇಂದ್ರವರ್ಮನ್ ಮತ್ತು ಒಂದನೇ ಪರಮೇಶ್ವರವರ್ಮನ್ರನ್ನು ಸೋಲಿಸಿದನು. ನಂತರ ಇವನ ಮಗನಾದ ವಿನಯಾದಿತ್ಯನು 2ನೇ ಮಹೇಂದ್ರವರ್ಮನನ್ನು ಸೋಲಿಸಿ ಕಂಚಿಯನ್ನು ವಶಪಡಿಸಿಕೊಂಡನು. ನಂತರ ಅಧಿಕಾರಕ್ಕೆ ಬಂದ ಇವನ ಮೊಮ್ಮಗ ವಿಜಯಾದಿತ್ಯನು ಪಲ್ಲವರನ್ನು ಸೋಲಿಸಿದನು. ಇವನು ಪಲ್ಲವ ಅರಸ 2ನೇ ನರಸಿಂಹವರ್ಮನನೊಡನೆ ಶಾಂತತೆಯನ್ನು ಕಾಯ್ದುಕೊಂಡಿದ್ದರಿಂದ ಕಂಚಿಯಲ್ಲಿ ಅನೇಕ ದೇವಾಲಯಗಳು ನಿರ್ಮಾಣಗೊಂಡವು.
ವಿಜಯಾದಿತ್ಯನ ಮಗನಾದ ಇಮ್ಮಡಿ ವಿಕ್ರಮಾದಿತ್ಯನ ಕಾಲಕ್ಕೆ ಪುನ: ಚಾಲುಕ್ಯ ಮತ್ತು ಪಲ್ಲವ ಸಂಘರ್ಷ ಆರಂಭವಾಯಿತು. ಇವನು ಕಂಚಿಯ ಮೇಲೆ ಮೂರು ಬಾರಿ ದಾಳಿ ಮಾಡಿದನು. ಇವನು ಸಾ.ಶ. 731ರಲ್ಲಿ ಪಲ್ಲವ ದೊರೆ 2ನೇ ಪರಮೇಶ್ವರವರ್ಮನ್ನನ್ನು ವಿಳಂದ ಎಂಬಲ್ಲಿ ಸೋಲಿಸಿದನು. ಸಾ.ಶ. 735ರಲ್ಲಿ ಪುನ: ದಾಳಿ ಮಾಡಿ ನಂದಿವರ್ಮನನ್ನು ಸೋಲಿಸಿ ಕಂಚಿಯನ್ನು ವಶಪಡಿಸಿಕೊಂಡನು. ಇವನು ಕಂಚಿಯ ರಾಜಸಿಂಹ ದೇವಾಲಯಕ್ಕೆ ಹೆಚ್ಚಿನ ದಾನ ನೀಡಿದನು ಮತ್ತು ತನ್ನ ವಿಜಯದ ಕುರಿತು ಅಲ್ಲಿ ಶಾಸನವನ್ನು ಬರೆಸಿದನು. ಸಾ.ಶ. 740ರ ಹೊತ್ತಿಗೆ ಪಲ್ಲವರು ಸಂಪೂರ್ಣವಾಗಿ ಸೋತುಹೋದರು. ರಾಷ್ಟ್ರಕೂಟರು ಚಾಲುಕ್ಯರ ಪ್ರಭಾವವನ್ನು ತಗ್ಗಿಸಿದ ನಂತರ ಚಾಲುಕ್ಯ ಮತ್ತು ಪಲ್ಲವರ ನಿರಂತರ ಸಂಘರ್ಷ ಕೊನೆಗೊಂಡಿತು. ಸುಮಾರು ನೂರು ವರ್ಷಗಳ ಕಾಲ ನಡೆದ ಚಾಲುಕ್ಯ ಪಲ್ಲವ ಸಂಘರ್ಷ ಈ ಎರಡೂ ಸಾಮ್ರಾಜ್ಯಗಳ ಅವನತಿಗೆ ಕಾರಣವಾಯಿತು.
ಬಾದಾಮಿ ಚಾಲುಕ್ಯರ ಸಾಂಸ್ಕೃತಿಕ ಕೊಡುಗೆಗಳು.
• ಧರ್ಮ:- ಚಾಲುಕ್ಯ ದೊರೆಗಳು ಸರ್ವಧರ್ಮ ಸಹಿಷ್ಣುಗಳಾಗಿದ್ದರು. ಇವರು ವಿಷ್ಣುವಿನ ಪರಮ ಭಕ್ತರಾಗಿದ್ದರೂ ಶೈವ, ಜೈನ ಮತ್ತು ಬೌದ್ಧ ಧರ್ಮಗಳಿಗೆ ರಾಜಾಶ್ರಯ ನೀಡಿದ್ದರು. ಬಾದಾಮಿಯ ಗುಹಾಂತರ ದೇವಾಲಯಗಳು ಇವರ ಧರ್ಮಸಹಿಷ್ಣುತೆಗೆ ಹಿಡಿದ ಕನ್ನಡಿಯಾಗಿದೆ. ಇವರು ಅನೇಕ ದೇವಾಲಯಗಳನ್ನು ಕಟ್ಟಿಸಿ ದಾನದತ್ತಿ ನೀಡಿದರು. ಪುರೋಹಿತರಿಗೆ ರಾಜಾಶ್ರಯ ನೀಡಿ ಗೌರವಿಸಿದರು. ಯಜ್ಞ-ಯಾಗಗಳಿಗೆ ಪ್ರೋತ್ಸಾಹ ನೀಡಿದರು. ಚಾಲುಕ್ಯರ ಕಾಲದಲ್ಲಿ ಬೌದ್ಧ ಧರ್ಮವು ಅಸ್ತಿತ್ವದಲ್ಲಿತ್ತು ಎಂದು ಹೂಯನ್-ತ್ಸಾಂಗ್ನು ಉಲ್ಲೇಖಿಸುತ್ತಾನೆ.
• ಸಾಹಿತ್ಯ :- ಬಾದಾಮಿ ಚಾಲುಕ್ಯ ದೊರೆಗಳು ಅನೇಕ ಪಂಡಿತರಿಗೆ ರಾಜಾಶ್ರಯ ನೀಡಿದ್ದರು. ಇವರ ಕಾಲದಲ್ಲಿ ಅನೇಕ ಶಿಲಾಶಾಸನಗಳು ಕನ್ನಡ ಹಾಗು ಸಂಸ್ಕೃತ ಭಾಷೆಯಲ್ಲಿ ರಚನೆಗೊಂಡವು. ಮಹಾಕೂಟ ಸ್ತಂಭಶಾಸನವು ಒಂದನೇ ಕೀರ್ತಿವರ್ಮನ ಸಾಧನೆಯನ್ನು ವಿವರಿಸುತ್ತದೆ. ಇಮ್ಮಡಿ ಪುಲಕೇಶಿಯ ಸೊಸೆ ವಿಜಯಮಹಾದೇವಿ (ವಿಜ್ಜಿಕಾ, ವಿಜಯಭಟ್ಟರಿಕಾ) ‘ಕೌಮುದಿ ಮಹೋತ್ಸವ’ ಕೃತಿಯನ್ನು ರಚಿಸಿದಳು. ಇಮ್ಮಡಿ ಪುಲಿಕೇಶಿಯ ಆಸ್ಥಾನ ಕವಿ ರವಿಕೀರ್ತಿ ಐಹೊಳೆ ಶಾಸನ ರಚಿಸಿದನು. ಇದು ಇಮ್ಮಡಿ ಪುಲಕೇಶಿಯ ಸಾಧನೆಗಳನ್ನು ವಿವರಿಸುತ್ತದೆ. ಆದ್ದರಿಂದ ಈ ಶಾಸನವನ್ನು ‘ಐಹೊಳೆ ಪ್ರಶಸ್ತಿ’ ಎಂದು ಕರೆಯಲಾಗಿದೆ. ಒಂದನೇ ಪುಲಕೇಶಿಯ ಬಾದಾಮಿ ಶಾಸನ, ಕಪ್ಪೆಅರಭಟ್ಟನ ಬಾದಾಮಿ ಶಾಸನ, ಮಂಗಳೇಶನ ಮಹಾಕೂಟ ಶಾಸನ ಮುಂತಾದ ಶಿಲಾಶಾಸನಗಳು ಚಾಲುಕ್ಯರ ಸಾಹಿತ್ಯ ಬೆಳವಣಿಗೆಯನ್ನು ಸೂಚಿಸುತ್ತವೆ.
• ಕಲೆ ಮತ್ತು ವಾಸ್ತು ಶಿಲ್ಪ :- ಬಾದಾಮಿ ಚಾಲುಕ್ಯರು ಭಾರತೀಯ ಕಲೆ ಮತ್ತು ವಾಸ್ತುಶಿಲ್ಪ ಕ್ಷೇತ್ರಕ್ಕೆ ಅದ್ಭುತ ಕೊಡುಗೆಗಳನ್ನು ನೀಡಿದ್ದಾರೆ. ದೇವಾಲಯದ ವಾಸ್ತುಶಿಲ್ಪದಲ್ಲಿ ಗರ್ಭಗೃಹ ಜೊತೆಗೆ ಸ್ತಂಭಮಂಟಪ (ನವರಂಗ) ಮತ್ತು ಸುಖನಾಸಿಗಳ ನಿರ್ಮಾಣ ಚಾಲುಕ್ಯರ ವಿಶಿಷ್ಟ ಕೊಡುಗೆ ಆಗಿದೆ. ಉತ್ತರದ ನಾಗರ ಮತ್ತು ದಕ್ಷಿಣದ ದ್ರಾವಿಡ ಶೈಲಿಗಳನ್ನು ಅನುಸರಿಸಿ ಅನೇಕ ದೇವಾಲಯಗಳನ್ನು ನಿರ್ಮಿಸಿದರು. ಇವರು ಕೆಂಪು ಮರಳುಗಲ್ಲುಗಳನ್ನು ಬಳಸಿ ದೇವಾಲಯಗಳನ್ನು ನಿರ್ಮಿಸಿದರು. ದೇವಾಲಯಗಳ ನಿರ್ಮಾಣದಲ್ಲಿ ಇವರು ಅನೇಕ ಪ್ರಯೋಗಗಳನ್ನು ಮಾಡಿದರು. ಇವರು ಚಿಕ್ಕ ಚಿಕ್ಕ ದೇವಾಲಯಗಳ ಮಾದರಿಯನ್ನು ನಿರ್ಮಿಸಿ ಅವುಗಳನ್ನು ಆಧರಿಸಿ ಮುಖ್ಯ ದೇವಾಲಯಗಳನ್ನು ನಿರ್ಮಿಸಿದರು. ಚಾಲುಕ್ಯರ ಕಲೆಯು ಐಹೊಳೆಯಲ್ಲಿ ಜನ್ಮತಾಳಿ ಬಾದಾಮಿ ಮತ್ತು ಪಟ್ಟದಕಲ್ಲಿನಲ್ಲಿ ಬೆಳೆಯಿತು. ಈ ಹಿನ್ನಲೆಯಲ್ಲಿ ಪರ್ಸಿಬ್ರೌನ್ ಚಾಲುಕ್ಯರ ವಾಸ್ತುಶಿಲ್ಪವನ್ನು “ಭಾರತೀಯ ದೇವಾಲಯಗಳ ವಾಸ್ತುಶಿಲ್ಪದ ತೊಟ್ಟಿಲು” ಎಂದಿದ್ದಾರೆ. ಬಾದಾಮಿ, ಐಹೊಳೆ ಮತ್ತು ಪಟ್ಟದಕಲ್ಲು ಇವರ ಕಲೆಯ ಪ್ರಮುಖ ಕೇಂದ್ರಗಳು.
ಬಾದಾಮಿ ಚಾಲುಕ್ಯರ ವಾಸ್ತುಶಿಲ್ಲದ ಪ್ರಮುಖ ಲಕ್ಷಣಗಳು.
1. ಚಿಕ್ಕದಾದ ತಳವಿನ್ಯಾಸ,
2. ಕುದುರೆ ಲಾಲಾರಸ ತಲಾಧಾರ ವಿನ್ಯಾಸ
3. ಚೌಕಾಕಾರ ಗರ್ಭಗೃಹ
4. ಒಳ ಪ್ರದಕ್ಷಿಣಪಥ
5. ಮುಖಮಂಟಪ, ನವರಂಗ, ಸುಕನಾಸಿ ಮತ್ತು ಗರ್ಭಗೃಹದ ಮೇಲೆ ಪಿರಾಮಿಡ್ಡಿನಾಕೃತಿ ಶಿಖರ
6. ಏಕಕೂಟ, ದ್ವಿಕೂಟ, ತ್ರಿಕೂಟ ದೇವಾಲಯಗಳ ರಚನೆ.
• ಗುಹಾಂತರ ದೇವಾಲಯಗಳು.
ಚಾಲುಕ್ಯರು ಬಾದಾಮಿಯಲ್ಲಿ ಬೃಹತ್ ಗುಡ್ಡವನ್ನು ಕೊರೆದು ನಿರ್ಮಿಸಿದ ನಾಲ್ಕು ಗುಹಾಂತರ ದೇವಾಲಯಗಳು ನೋಡುಗರ ಗಮನ ಸೆಳೆಯುತ್ತವೆ. ಇವು ಮುಖಮಂಟಪ, ದೊಡ್ಡ ರಂಗಮಂಟಪ ಮತ್ತು ಗರ್ಭಗೃಹಗಳನ್ನು ಹೊಂದಿವೆ. ಮೊದಲನೇ ಗುಹೆ ಶೈವ ಧರ್ಮಕ್ಕೆ ಸೇರಿದೆ. ಇಲ್ಲಿರುವ ಅರ್ಧನಾರೀಶ್ವರ ಮತ್ತು ನಟರಾಜನ ಶಿಲ್ಪಗಳು ಆಕರ್ಷಣೀಯವಾಗಿವೆ. ಎರಡನೇ ಮತ್ತು ಮೂರನೇ ಗುಹೆಗಳು ವೈಷ್ಣವ ಧರ್ಮಕ್ಕೆ ಸೇರಿವೆ. ಎರಡನೇ ಗುಹಾಲಯದಲ್ಲಿರುವ ವರಾಹ ಮತ್ತು ವಾಮನ ಉಬ್ಬು ಶಿಲ್ಪಗಳು ಗಮನಾರ್ಹವಾಗಿವೆ. ಮೂರನೇ ಗುಹೆಯು ಎಲ್ಲವುಗಳಿಗಿಂತ ದೊಡ್ಡದು. ಈ ಗುಹೆಯನ್ನು ಮಂಗಳೇಶನು ಕೆತ್ತಿಸಿದನು. ಈ ಗುಹಾಲಯದಲ್ಲಿರುವ ಭೂದೇವಿ, ಶೇಷನ ಮೇಲೆ ಕುಳಿತಂತಿರುವ ವಿಷ್ಣು ಹಾಗೂ ನರಸಿಂಹ, ವಾಮನ, ಬಲರಾಮ, ಹರಿಹರ ಶಿಲ್ಪಗಳು ನೋಡುಗರ ಮನ ಸೆಳೆಯುತ್ತವೆ. ನಾಲ್ಕನೇ ಗುಹೆ ಎಲ್ಲವುಗಳಿಗಿಂತ ಚಿಕ್ಕದು. ಇದು ಜೈನ ಗುಹೆ ಆಗಿದೆ. ಈ ಗುಹಾಲಯದಲ್ಲಿ ಮಹಾವೀರ, ಮಹಾವೀರನ ಶಿಷ್ಯ ಗೌತಮ ಮತ್ತು 23ನೇ ತೀರ್ಥಂಕರನಾದ ಪಾರ್ಶ್ವನಾಥನ ಶಿಲ್ಪಗಳನ್ನು ಕಾಣಬಹುದು. ಮೇಲಿನ ಈ ಬಸದಿಯನ್ನು ಕ್ರಮೇಣ ಮೇಲಣ ಅಥವಾ ಮೇಣ ಬಸದಿಗಳೆಂದು ಕರೆಯಲಾಗಿದೆ.
ಬಾದಾಮಿಯು ಗುಹಾಂತರ ದೇವಾಲಯಗಳಿಗೆ ಪ್ರಸಿದ್ಧಿಯಾಗಿದ್ದರೂ ಇಲ್ಲಿ ಕೆಲವು ಕಲಾತ್ಮಕ ದೇವಾಲಯಗಳನ್ನು ಕಾಣಬಹುದು. ಅವುಗಳಲ್ಲಿ ಮಾಲಗಿತ್ತಿ ಶಿವಾಲಯ, ಭೂತನಾಥ ದೇವಾಲಯ, ಲಕುಮೀಶ ದೇವಾಲಯ ಮತ್ತು ವಿರೂಪಾಕ್ಷ ದೇವಾಲಯ ಪ್ರಮುಖವಾಗಿವೆ.
• ಐಹೊಳೆ:- ಬಾದಾಮಿ ಚಾಲುಕ್ಯರ ಕಲೆಯ ಮತ್ತೊಂದು ಕೇಂದ್ರವಾಗಿದ್ದ ಐಹೊಳೆ ಒಮ್ಮೆ ಪ್ರಸಿದ್ಧ ವ್ಯಾಪಾರ ಕೇಂದ್ರವಾಗಿತ್ತು. ಚಾಲುಕ್ಯರ ಕಲೆಯ ಅನೇಕ ದೇವಾಲಯಗಳನ್ನು ಇಲ್ಲಿ ಕಾಣಬಹುದು.
• ಲಾಡ್ ಖಾನ್ ದೇವಾಲಯ:- ಇದು ಬಾದಾಮಿ ಚಾಲುಕ್ಯರ ಕಲೆಯ ಆರಂಭಿಕ ದೇವಾಲಯವಾಗಿದೆ. ಮುಖಮಂಟಪ ಮತ್ತು ಗರ್ಭಗೃಹಗಳನ್ನು ಹೊಂದಿರುವ ಈ ದೇವಾಲಯದ ಮುಂದೆ ನಂದಿ ವಿಗ್ರಹವಿದೆ. ಗರ್ಭಗೃಹದ ಮೇಲೆ ಮತ್ತೊಂದು ಗರ್ಭಗೃಹವಿರುವುದು ಈ ದೇವಾಲಯದ ವೈಶಿಷ್ಟ್ಯವಾಗಿದೆ. ಗರ್ಭಗೃಹದ ಬಾಗಿಲ ಮೇಲೆ ಗರುಡನ ಶಿಲ್ಪವಿರುವುದನ್ನು ಗಮನಿಸಿದ ಕಲಾ ವಿಮರ್ಶಕ ಹೆನ್ರಿ ಕಸಿನ್ಸ್ ಇದು ವೈಷ್ಣವ ದೇವಾಲಯ ಎಂದು ಕರೆದಿದ್ದಾರೆ. ಆದರೆ ಗರ್ಭಗೃಹದಲ್ಲಿ ಶಿವಲಿಂಗವಿತ್ತು ಎನ್ನುವುದು ಇಲ್ಲಿರುವ ನಂದಿ ವಿಗ್ರಹದಿಂದ ತಿಳಿಯುವುದು. ಲಾಡ್ಖಾನ್ ಎಂಬ ಮುಸ್ಲಿಂ ಸಂತ ಇಲ್ಲಿ ಹೆಚ್ಚು ದಿನಗಳ ಕಾಲ ವಾಸವಾಗಿದ್ದರಿಂದ ಜನರು ಈ ದೇವಾಲಯವನ್ನು ಲಾಡ್ಖಾನ್ ದೇವಾಲಯವೆಂದು ಕರೆಯುತ್ತಾರೆ.
• ದುರ್ಗದ ದೇವಾಲಯ:- ಐಹೊಳೆ ದೇವಾಲಯಗಳಲ್ಲಿಯೇ ದುರ್ಗದ ದೇವಾಲಯ ತುಂಬಾ ವಿಶಿಷ್ಠ ವಾಗಿದೆ. ಕುದುರೆ ಲಾಳಾಕೃತಿ ಮತ್ತು ಬೌದ್ಧ ಚೈತ್ಯಾಲಯ ವಿನ್ಯಾಸದಲ್ಲಿರುವ ಈ ದೇವಾಲಯವು ಸೂರ್ಯ ದೇವಾಲಯವಾಗಿದೆ. ದೇವಾಲಯದ ಶಿಖರವು ಒರಿಸ್ಸಾದ ದೇವಾಲಯಗಳ ಶಿಖರವನ್ನು ಹೋಲುತ್ತದೆ. ಎರಡು ಸಾಲು ಕಂಬಗಳ ರಂಗಮಂಟಪ ಮತ್ತು ಎರಡೂ ಪಕ್ಕಗಳಲ್ಲಿನ ಹಜಾರವು ಗರ್ಭಗೃಹದವರೆಗೆ ಹೋಗಿ ಅರ್ಧವೃತ್ತದಲ್ಲಿ ಸೇರಿರುವುದು ನೋಡುಗರನ್ನು ವಿಸ್ಮಯಗೊಳಿಸುತ್ತದೆ. ದೇವಾಲಯದ ಸುತ್ತ ಕೋಟೆಯ ಗೋಡೆ ಇದ್ದುದರಿಂದ ದುರ್ಗ (ಕೋಟೆ) ದೇವಾಲಯ ಎಂದು ಕರೆಯಲಾಗಿದೆ. ದುರ್ಗದ ದೇವಾಲಯದ ಮುಂಭಾಗದಲ್ಲಿ ಕೊಂತಿಗುಡಿಗಳ ಗುಂಪು ಕಾಣಿಸುತ್ತದೆ. ಇವು ಕೂಡ ಬಾದಾಮಿ ಚಾಲುಕ್ಯರ ಪ್ರಾಚೀನ ಗುಡಿಗಳಾಗಿದ್ದು ಪ್ರಯೋಗಾರ್ಥವಾಗಿ ನಿರ್ಮಿಸಿದ ಮಾದರಿ ದೇವಾಲಯಗಳಾಗಿವೆ.
ಹುಚ್ಚಿಮಲ್ಲಿ ಗುಡಿ ದೇವಾಲಯವು ಸರಳ ರಚನೆಯನ್ನು ಹೊಂದಿರುವ ಚಿಕ್ಕದಾದ ಗುಡಿಯಾಗಿದೆ. ಇದು ಚೌಕಾಕಾರದ ಕಂಬಗಳಿಂದ ಕೂಡಿದೆ.
• ಮೇಗುತಿ ಜೈನ ದೇವಾಲಯ:- ಐಹೊಳೆ ಪಕ್ಕದ ಚಿಕ್ಕ ಗುಡ್ಡದ ಮೇಲೆ ಇರುವ ಮೇಗುತಿ ಜೈನ ದೇವಾಲಯವನ್ನು ರವಿಕೀರ್ತಿ ಕಟ್ಟಿಸಿದನು. ಈ ದೇವಾಲಯದ ಪೂರ್ವ ಗೋಡೆಯ ಮೇಲೆ ಐಹೊಳೆ ಶಾಸನವನ್ನು ಬರೆಯಲಾಗಿದೆ. ಮುಖಮಂಟಪ, ಮಧ್ಯರಂಗ ಮಂಟಪ ಮತ್ತು ಗರ್ಭಗೃಹಗಳನ್ನು ಹೊಂದಿರುವ ಈ ದೇವಾಲಯ ದ್ರಾವಿಡ ಶೈಲಿಯಲ್ಲಿ ನಿರ್ಮಾಣಗೊಂಡಿದೆ. ಗುಡ್ಡದ ಮೇಲೆ ಕಟ್ಟಲಾದ ಇದನ್ನು ಮೇಲುಗುಡಿ ಎಂದು ಕರೆಯುತ್ತಿದ್ದರು. ಕ್ರಮೇಣ ಮೇಗುಡಿ, ಮೇಗುತಿ ದೇವಾಲಯವಾಗಿರಬೇಕು ಎನ್ನುವುದು ವಿದ್ವಾಂಸರ ಅಭಿಪ್ರಾಯ.
ಐಹೊಳೆಯ ರಾವಳಗುಡಿ ಎಂಬ ಗುಹೆಯಲ್ಲಿರುವ ಶಿವಲಿಂಗ, ವರಾಹ ಅವತಾರ, ಕಾಳಿ ಮತ್ತು ನಟರಾಜ ಉಬ್ಬು ಶಿಲ್ಪಗಳು ಗಮನ ಸೆಳೆಯುತ್ತವೆ. ಇಲ್ಲಿನ ಇತರೆ ಪ್ರಮುಖ ದೇವಾಲಯಗಳೆಂದರೆ- ಜ್ಯೋತಿರ್ಲಿಂಗ, ಮಲ್ಲಿಕಾರ್ಜುನ ಮತ್ತು ಸಿದ್ದೇಶ್ವರ ಮುಂತಾದವುಗಳು.
ಐಹೊಳೆಯಿಂದ ಅರ್ಧ ಮೈಲು ದೂರದಲ್ಲಿರುವ ರಾಮಲಿಂಗ ದೇವಾಲಯವು ಮೂರು ಗರ್ಭಗೃಹಗಳನ್ನು ಹೊಂದಿದೆ.
• ಪಟ್ಟದಕಲ್ಲು :- ಪಟ್ಟದಕಲ್ಲಿನ ಪ್ರಾಚೀನ ಹೆಸರು ‘ಕಿಸುವೊಳಲು’. ಬಾದಾಮಿ ಚಾಲುಕ್ಯರ ಅನೇಕ ದೇವಾಲಯಗಳು ಇಲ್ಲಿವೆ. ಕಾಶಿವಿಶ್ವನಾಥ, ಪಾಪನಾಥ, ಜಂಬುಲಿಂಗೇಶ್ವರ ದೇವಾಲಯಗಳು ನಾಗರ ಶೈಲಿಯಲ್ಲಿದ್ದರೆ, ಸಂಗಮೇಶ್ವರ, ವಿರೂಪಾಕ್ಷ, ಮಲ್ಲಿಕಾರ್ಜುನ ದೇವಾಲಯಗಳು ದ್ರಾವಿಡ ಶೈಲಿಯಲ್ಲಿವೆ.
ವಿರೂಪಾಕ್ಷ (ಲೋಕೇಶ್ವರ ದೇವಾಲಯ) ದೇವಾಲಯವು ಪಟ್ಟದ ಕಲ್ಲಿನಲ್ಲಿರುವ ದೇವಾಲಯಗಳಲ್ಲಿಯೇ ಮುಖ್ಯವಾದುದಾಗಿದೆ. 2ನೇ ವಿಕ್ರಮಾದಿತ್ಯನು ಪಲ್ಲವರ ಮೇಲೆ ಮೂರುಬಾರಿ ಗಳಿಸಿದ ಗೆಲುವಿನ ನೆನಪಿಗಾಗಿ ಆತನ ಮಹಾರಾಣಿ ಲೋಕಮಹಾದೇವಿ ಇದನ್ನು ಕಟ್ಟಿಸಿದಳು. ಈ ದೇವಾಲಯವನ್ನು ಕಟ್ಟಿದ ಶಿಲ್ಪಿ ಅನಿರ್ವಾತಾಚಾರಿ ಗುಂಡ. ಇದು 224 ಅಡಿ ಉದ್ದ, 105 ಅಡಿ ಅಗಲವಿದೆ. ದೇವಾಲಯವನ್ನು ಸಿಂಹಗಳು ಮತ್ತು ತೊಲೆಗಳನ್ನು ಆನೆಗಳು ಹೊತ್ತುಕೊಂಡು ನಿಂತಂತೆ ಕಾಣುತ್ತವೆ. ದೇವಾಲಯದ ಮುಂಭಾಗದ ನಂದಿ ಮಂಟಪದಲ್ಲಿ ಬೃಹತ್ ನಂದಿ ವಿಗ್ರಹವಿದೆ. ಮುಖಮಂಟಪ, ಮಹಾಮಂಟಪ, ಗರ್ಭಗೃಹಗಳನ್ನು ಹೊಂದಿರುವ ಈ ದೇವಾಲಯವು ದ್ರಾವಿಡ ಶೈಲಿಯ ಶಿಖರವನ್ನು ಹೊಂದಿದೆ. ಅರ್ಧಮಂಟಪದಲ್ಲಿರುವ ಸೂರ್ಯ ಮೂರ್ತಿ ಶಿಲ್ಪವು ಅತ್ಯಂತ ಸುಂದರವಾಗಿದೆ.
• ಮಲ್ಲಿಕಾರ್ಜುನ:- ಈ ದೇವಾಲಯವನ್ನು ಹೋಲುವಂತಹ ಮಲ್ಲಿಕಾರ್ಜುನ (ತ್ರೈಲೋಕೇಶ್ವರ) ದೇವಾಲಯವು ಇದರ ಪಕ್ಕದಲ್ಲಿದೆ. ಈ ದೇವಾಲಯವನ್ನು ಎರಡನೇ ವಿಕ್ರಮಾದಿತ್ಯನ ಇನ್ನೊಬ್ಬ ರಾಣಿ ತ್ರೈಲೋಕಮಹಾದೇವಿ ಕಟ್ಟಿಸಿದಳು.
ಮಹಾಕೂಟದಲ್ಲಿರುವ ಮಹಾಕೂಟೇಶ್ವರ ದೇವಾಲಯವೂ ಬಾದಾಮಿ ಚಾಲುಕ್ಯರ ಕಲೆಯನ್ನು ಪ್ರದರ್ಶಿಸುತ್ತದೆ.