ರಾಜ್ಯದ ಎಲ್ಲ ಗ್ರಾಮ ಪಂಚಾಯತಿಗಳಲ್ಲಿ ಆಗಸ್ಟ್ ತಿಂಗಳು ಪೂರ್ತಿ ಸ್ವಾತಂತ್ರ್ಯ ದಿನಾಚರಣೆ – Independence Day.
ರಾಜ್ಯದ ಎಲ್ಲ ಗ್ರಾಮ ಪಂಚಾಯತಿ ಅರಿವು ಕೇಂದ್ರಗಳಲ್ಲಿ ಆಗಸ್ಟ್ ತಿಂಗಳಿಡೀ ‘ಭಾರತ ಸ್ವಾತಂತ್ರ್ಯ ದಿನಾಚರಣೆ’ ಸಂಭ್ರಮೋತ್ಸವ ಆಯೋಜಿಸಲಾಗುತ್ತಿದೆ.
ಹಾಯ್ ಗೆಳೆಯರೇ; ಗ್ರಾಮ ಪಂಚಾಯತಿ ಅರಿವು ಕೇಂದ್ರಗಳಲ್ಲಿ ‘ಓದುವ ಬೆಳಕು’ ಕಾರ್ಯಕ್ರಮದ ಅಂಗವಾಗಿ ಆಗಸ್ಟ್ ತಿಂಗಳು ಪೂರ್ತಿ ‘ಭಾರತ ಸ್ವಾತಂತ್ರ್ಯ ದಿನಾಚರಣೆ’ ಸಂಭ್ರಮೋತ್ಸವ ಆಯೋಜಿಸುವಂತೆ ರಾಜ್ಯದ ಎಲ್ಲ ಗ್ರಾಮ ಪಂಚಾಯತಿಗಳಿಗೂ ಮಾಹಿತಿ ನೀಡಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಗ್ರಾಮ ಪಂಚಾಯತಿ ಅರಿವು ಕೇಂದ್ರಗಳಿಗೆ ಭೇಟಿ ನೀಡುವ ಮಕ್ಕಳಿಗೆ ಸ್ವಾತಂತ್ರ್ಯ ಹೋರಾಟಕ್ಕೆ ಸಂಬಂಧಿಸಿದಂತೆ ಪ್ರತಿದಿನ ಒಂದೊಂದು ಘಟನೆ ಅಥವಾ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ‘ಮಕ್ಕಳಿಗಾಗಿ ಗಾಂಧಿ’, ‘ಸ್ವರಾಜ್ಯದ ಕಥೆ’ ಇನ್ನಿತರ ಸ್ವಾತಂತ್ರ್ಯದ ಪುಸ್ತಕಗಳನ್ನು ಬಳಸಿ ‘ಗಟ್ಟಿ ಓದು’ ಮಾಡಿಸುವುದು, ಗುಂಪು ಚರ್ಚೆ, ಭಾಷಣ ಕಾರ್ಯಕ್ರಮ ಹಾಗೂ ಪ್ರಬಂಧ ಸ್ಪರ್ಧೆ ಸೇರಿ ಮುಂತಾದ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಸೂಚಿಸಲಾಗಿದೆ. ಜೊತೆಗೆ, ಆಗಸ್ಟ್ ತಿಂಗಳಿನಲ್ಲಿ ಗ್ರಂಥಾಲಯಕ್ಕೆ ಬರುವ ಎಲ್ಲಾ ಮಕ್ಕಳಿಗೂ ತ್ರಿವರ್ಣ ಧ್ವಜ ಮತ್ತು ಬ್ಯಾಡ್ಜ್ ತಯಾರಿಸಲು ತಿಳಿಸಲು ಗ್ರಂಥಾಲಯಗಳ ಮೇಲ್ವಿಚಾರಕರಿಗೆ ತಿಳಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಸಂವಿಧಾನದ ಮೂಲ ಆಶಯಗಳ ಬಗ್ಗೆ ಮಕ್ಕಳಲ್ಲಿ ಚಿಕ್ಕ ವಯಸ್ಸಿನಲ್ಲಿಯೇ ಅರಿವು ಮೂಡಿಸಲು ಭಾರತ ಸಂವಿಧಾನದ ಪೀಠಿಕೆಯನ್ನು ಸಾಮೂಹಿಕವಾಗಿ ಓದಲು ಪ್ರೇರೇಪಿಸುವಂತೆ ಹೇಳಲಾಗಿದೆ. ಸ್ವಾತಂತ್ರ್ಯ ದಿನದ ಹಾಡುಗಳು ಹಾಗೂ ದೇಶಭಕ್ತಿ ಗೀತೆಗಳನ್ನು ಅಭ್ಯಾಸ ಮಾಡಲು ಮಕ್ಕಳನ್ನು ಒಟ್ಟುಗೂಡಿಸಲು ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಭಾರತ ಚಳವಳಿಗೆ ಕೊಡುಗೆ ನೀಡಿದ ಕರ್ನಾಟಕದ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಥಳೀಯ ಹಿರಿಯರು, ಶಾಲಾ ಶಿಕ್ಷಕರ ಮೂಲಕ ಮಕ್ಕಳಿಗೆ ಪರಿಚಯಿಸುವುದು ಹಾಗೂ ದೇಶಭಕ್ತಿ, ಸಾಮಾಜಿಕ ಕಾಳಜಿಯುಳ್ಳ ದೇಶಭಕ್ತರ ಚಲನಚಿತ್ರಗಳನ್ನು ಪ್ರದರ್ಶಿಸಲು ಕ್ರಮ ವಹಿಸಬೇಕು ಎಂದೂ ಗ್ರಾಮ ಪಂಚಾಯತಿಗಳಿಗೆ ತಿಳಿಸಲಾಗಿದೆ ಎಂದು ಸಚಿವರು ಹೇಳಿದ್ದಾರೆ.